Monday 9 February 2009

ಯಾಕೆ ಹೀಗೆ?

ಯಾಕೆ ಹೀಗೆ? ನಮ್ಮ ದೇಶದ ಟಿವಿ ಮಾಧ್ಯಮಕ್ಕೆ ಹಿಂದೂ ಎಂದರೆ ಆಗುವುದಿಲ್ಲ! ಅವಕಾಶ ಸಿಕ್ಕಿದರೆ ಸಾಕು, ನಾ ಮುಂದು ತಾ ಮುಂದು ಎಂದು ನುಗ್ಗುತ್ತಾರೆ! ಮಂಗಳೂರಿನಲ್ಲಿ ಇತ್ತೇಚೆಗೆ ನಡೆದ ಎರಡು ಘಟನೆಗಳನ್ನು ನೋಡೋಣ.

ಪಬ್ ಮೇಲೆ ನಡೆದ ದಾಳಿ, ಅಲ್ಲಿ ಇದ್ದ ಹುಡುಗರು ಹಾಗು ಹುಡುಗಿಯರ ಮೇಲೆ ನಡೆಸಿದ ದಾಳಿ ಖಂಡನೀಯ. ಇದು ಒಂದು ಸಂಘಟನೆಯ ಗೂಂಡಾಗಿರಿ! ಈ ಗೂಂಡಾಗಿರಿಯನ್ನು ಎಲ್ಲರು ಖಂಡಿಸಬೇಕು. ಶ್ರೀ ರಾಮ ಸೇನೆಗೆ ಯಾರಿಗೂ ಹೊಡೆಯುವ ಹಕ್ಕು ಇಲ್ಲ. ಆ ಪಬ್ಬಿನಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯುತ್ತಿದ್ದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಪೋಲಿಸ್-ಗೆ ದೂರು ಕೊಡಬಹುದಿತ್ತು. ಈ ಒಂದು ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಒಳಗಾಯಿತು. ಟಿವಿ ಮಾಧ್ಯಮದವರು ಈ ಘಟನೆಯನ್ನು ಹಿಂದುತ್ವಕ್ಕೆ ಜೋಡಿಸಿದರು. ಎಲ್ಲಾ ಹಿಂದೂ ಸಂಘಟನೆಗಳನ್ನು ಬೈದರು. ಭಾಜಪ ಸರ್ಕಾರವನ್ನು ಬೈದರು. ಒಂದು ಊರಿನಲ್ಲಿ ನಡೆದ ಗೂಂಡಾಗಿರಿಯು ರಾಷ್ಟ್ರೀಯ ಚರ್ಚೆಯಾಯಿತು.

ಕಳೆದ ವರ್ಷ ಹೈದರಾಬಾದಿನಲ್ಲಿ ನಡೆದ ಒಂದು ಘಟನೆಯಲ್ಲಿ, ಒಂದು ಪಕ್ಷವು ತಸ್ಲಿಮಾ ನಸ್ರೀನ್ ಮೇಲೆ ಹಲ್ಲೆ ನಡೆಸಿತು. ಆ ಪಕ್ಷದ ಚುನಾಯಿತ ಪ್ರತಿನಿಧಿ ಆ ಘಟನೆಯನ್ನು ಸಮರ್ಥಿಸಿಕೊಂಡರು. ಆ ಘಟನೆ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆಯಾದರೂ, ಯಾರೂ ಈ ಘಟನೆಯನ್ನು ಮುಂದಿಟ್ಟುಕೊಂಡು ಒಂದು ಧರ್ಮದಮೇಲೆ ಚಕಾರ ಎತ್ತಲಿಲ್ಲ! ಯಾಕೆ ಹೀಗೆ?

ಇನ್ನೊಂದು ಘಟನೆಯಲ್ಲಿ, ಕೇರಳ MLAಯ ಮಗಳನ್ನು ಮತ್ತು ಅವರ ಜೊತೆ ಇದ್ದ ಒಬ್ಬ ಮುಸ್ಲಿಂ ಹುಡುಗನ ಮೇಲೆ ಒಂದು ಗುಂಪು ದಾಳಿಮಾಡಿತು. ತಕ್ಷಣ ಎಲ್ಲಾ ಮಾಧ್ಯಮದವರು ಈ ಘಟನೆಯ ಹಿಂದೆ ಹಿಂದು ಸಂಘಟನೆಯ ಕೈವಾಡವಿದೆ ಎಂದು ಬರೆದರು. ಪೋಲಿಸ್ ವಿಚಾರಣೆ ನಂತರ ತಿಳಿದುಬಂದ ವಿಷಯವೇನೆಂದರೆ, ಈ ಘಟನೆಯ ಹಿಂದೆ CPI-Mafioso ಪಕ್ಷದ ಕಾರ್ಯಕರ್ತರ ಕೈವಾಡವಿದೆ ಎಂದು. ನಿಜ ಗೊತ್ತಾದಮೇಲೆ ಮಾಧ್ಯಮದವರು ಈ ವಿಚಾರವನ್ನು ಕೈ ಬಿಟ್ಟರು. ಯಾರೂ ಈ CPI-Mafioso ಪಕ್ಷವನ್ನು ವಜಾ ಮಾಡಿ ಎಂದು ಕೇಳಲಿಲ್ಲ!

ನಾನು ಯಾವುದೇ ಅತ್ಯಾಚಾರವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದ್ರೆ ಮಾಧ್ಯಮದವರು ಹಿಂದು ಸಂಘಟನೆಯ ವಿಚಾರ ಬಂದಾಗ ಕೇಸರೀಕರಣ, ಹಿಂದುತ್ವ ಎಂದು ಬೊಬ್ಬೆ ಮಾಡುತ್ತಾರೆ! ಬೇರೆ ಧರ್ಮದ / ಪಕ್ಷದ ವಿಚಾರ ಬಂದಾಗ, ಬಾಯಿ ಮುಚ್ಚಿಕೊಂಡು ಇರುತ್ತಾರೆ! ಯಾಕೆ ಹೀಗೆ?

Thursday 6 December 2007

ಶಾಂತಮೂರ್ತಿ ಬುದ್ಧನ ವಿಗ್ರಹ

ಹೈದರಾಬಾದಿನ "ಹುಸೈನ್ ಸಾಗರ್" ಎಂಬ ಕೆರೆಯಲ್ಲಿ ಬುದ್ಧನ ಪ್ರತಿಮೆ ಇದೆ. ಈ ವಿಗ್ರಹ ೧೬ ಮೀಟರ್ ಎತ್ತರ ಹಾಗು ೩೫೦ ಟನ್ ತೂಕವಿದೆ. ಈ ವಿಗ್ರಹವನ್ನು ಶ್ವೇತ ಗ್ರಾನೈಟ್ ಕಲ್ಲಿನಿಂದ ಕೆತ್ತಿದ್ದಾರೆ.
ಈ ವಿಗ್ರಹವನ್ನು ೧೯೮೮ರಲ್ಲಿ ಹೈದರಾಬಾದಿಗೆ ತರಲಾಯಿತು. ಅದನ್ನು ಕೆರೆಯ ಮಧ್ಯೆ ಸಾಗಿಸುವಾಗ ಕೆರೆಯಲ್ಲಿ ಮುಳುಗಿತು. ಬಹಳ ಪ್ರಯತ್ನಗಳ ನಂತರ ೧೯೯೨ರಲ್ಲಿ ಈ ವಿಗ್ರಹವನ್ನು ಸ್ಥಾಪಿಸಲಾಯಿತು.


Tuesday 27 November 2007

ಶನಿವಾರ ಮಾತ್ರ ದರ್ಶನ ಕೊಡುವ ದೇವರು!

ಆಂಧ್ರಪ್ರದೇಶದ ಪ್ರಕಾಸಂ ತಾಲುಕ್ಕಿನ ಕಂಡಕೂರ್ ಎಂಬ ಪ್ರದೇಶದ ಹತ್ತಿರ ಮಲಕೊಂಡ ಎಂಬ ಸ್ಥಳವಿದೆ. ಇಲ್ಲಿನ ಪುರಾತನ 'ಜ್ವಾಲಾ ನರಸಿಂಹ ಸ್ವಾಮಿ' ದೇವಸ್ಥಾನವನ್ನು ಶನಿವಾರ ಮಾತ್ರ ದರ್ಶನಕ್ಕೆ ತೆರೆಯುತ್ತಾರೆ. ವಾರದ ೬ ದಿನಗಳು ಈ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ! ಈ ಪದ್ದತಿಯ ಹಿಂದೆ ಕೆಲವು ಕಥೆಗಳು ಇದ್ದು, ಈ ದೇವಸ್ಥಾನವನ್ನು ಪ್ರತಿದಿನವೂ ತೆರೆಯುವ ಪ್ರಯತ್ನ ವಿಫಲವಾಗಿದೆ. ಆದ್ದರಿಂದ ಇಲ್ಲಿಯ ಜನರಿಗೆ ಈ ದೇವರು ಶನಿವಾರ ಮಾತ್ರ ದರ್ಶನ ಕೊಡುವ ಇಚ್ಛೆ ಇದೆಯೆಂಬ ನಂಬಿಕೆ.

ಸ್ಥಳ ಪುರಾಣದ ಪ್ರಕಾರ, ಅಗಸ್ತ್ಯ ಮಹರ್ಶಿಯ ವಿನಂತಿ ಮೇರೆಗೆ ನರಸಿಂಹ ಸ್ವಾಮಿ ದೇವರು ಈ ಸ್ಥಳದಲ್ಲಿ ನೆಲೆಸಿದರು. ಹಾಗು ವಾರದಲ್ಲಿ ಒಂದು ದಿನ ಮಾತ್ರ ಸಾಮಾನ್ಯ ಮನುಷ್ಯರಿಗೆ ದರ್ಶನ ನೀಡಲು ಒಪ್ಪಿ, ಮಿಕ್ಕಿದ ದಿನಗಳು ಋಷಿಗಳಿಗೆ ಮೀಸಲಿಟ್ಟರು.
ಇಲ್ಲಿನ ಒಬ್ಬ ನಾಗರಿಕರು ಹೇಳುವಂತೆ, "ಈ ದೇವಸ್ಥಾನವನ್ನು ಎಲ್ಲಾ ದಿನಗಳು ತೆರೆಯುವಂತೆ ಎಷ್ಟೋ ಪ್ರಯತ್ನಗಳು ಮಾಡಿದ್ದಾರೆ. ಆ ಪ್ರಯತ್ನ ಮಾಡಿದಾಗಲೆಲ್ಲಾ ಒಂದಲ್ಲ ಒಂದು ಅಹಿತಕರ ಘಟನೆಗಳು ನಡೆದಿವೆ!".

ಈ ದೇವಸ್ಥಾನವನ್ನು ಪ್ರತಿದಿನವು ತೆರೆಯುವುದಕ್ಕೆ ಅಂಗಿಕಾರವನ್ನು ನೀಡಿದ ದೇವಸ್ಥಾನ ಟ್ರಸ್ಟಿನ ಒಬ್ಬರು ಹೃದಯಾಘಾತದಿಂದ ಅಸುನೀಗಿದರು. ೧೯೯೯ ರಲ್ಲಿ, ಇದೇ ಕಾರಣಕ್ಕೆ ಇನ್ನೊಬ್ಬ ಅಧಿಕಾರಿ ಆಸ್ಪತ್ರೆ ಸೇರಬೇಕಾಯಿತು. ಹೀಗೆ ಹಲವಾರು ಘಟಣೆಗಳು ನಡೆದಿವೆ.

ಪ್ರತಿ ಶನಿವಾರ ಸುಮಾರು ೭೦೦೦ ಜನ ದೇವರ ದರ್ಶನಕ್ಕೆ ಬರುತ್ತಾರೆ. ದೇವಸ್ಥಾನವನ್ನು ಪ್ರತಿದಿನ ತೆಗೆದರೆ ಎಲ್ಲರಿಗೂ ಅನಕೂಲವಾಗುತ್ತದೆ ಎಂದು ಯೋಚಿಸಿದ್ದಾರೆ. ಆದರೆ, ಈ ನಿರ್ಣಯ ತೆಗೆದುಕೊಳ್ಳುವುದ್ದಕ್ಕೆ ಎಲ್ಲರಿಗೂ ಹೆದರಿಕೆ.

ಈ ದೇವಸ್ಥಾನದ ಕೆಲವು ವಿಶೇಷಗಳೆಂದರೆ, ಈ ಮೂರ್ತಿ 'ಸ್ವಯಂಭು'. ವಿಗ್ರಹ ದಕ್ಷಿಣ ದಿಕ್ಕಿಗೆ ಮುಖ ಮಾಡಿದೆ. ಹಿರಣ್ಯಕಶ್ಯಪುವನ್ನು ಕೊಲ್ಲುವ ಭಂಗಿಯಲ್ಲಿ ಇದೆ.

ಮೂಲ: ಹೈದರಾಬಾದಿನ ದಿನಪತ್ರಿಕೆ ಡೆಕ್ಕನ್ ಕ್ರೋನಿಕಲ್, ೨೨-೧೧-೨೦೦೭, ಪುಟ: ೯

Friday 23 November 2007

ಹುಡುಗಿ...

"ಅಲ್ಲಿ ನಿಂತಿದ್ದ ಹುಡುಗಿಯನ್ನು ನೋಡಿ

ನನ್ನ ಹೃದಯವು ಅರಳಿತು

ಅಲ್ಲಿಗೆ ಬಂದ ಅವಳ ಅಪ್ಪನನ್ನು ನೋಡಿ

ನನ್ನ ಕಾಲುಗಳು ಓಡಿತು!"

ಈ ಚುಟುಕವನ್ನು ನಾನು ರಚಿಸಿದ್ದು ೩-೪ ವರ್ಷಗಳ ಹಿಂದೆ. ನಾನು ಬೆಂಗಳೂರಿನ ಮಲ್ಲೇಶ್ವರಮ್-ನಲ್ಲಿ ಹಾಗೆ ಸುತ್ತಾಡುತ್ತಿದ್ದಾಗ, ೮ನೇ ಕ್ರಾಸ್ನಲ್ಲಿ ಒಬ್ಬ ಸುಂದರ ಹುಡುಗಿಯನ್ನು ನೋಡಿ ಹಾಗೆ ಅಲ್ಲೇ ನಿಂತಿದ್ದೆ. ತಕ್ಷಣ ಎಲ್ಲಿಂದಲೋ ಅವಳ ಅಪ್ಪ (ನನ್ನ ಅನಿಸಿಕೆ ಮಾತ್ರ, ಆ ಮನುಷ್ಯ ಅಪ್ಪನ ತರ ಕಾಣಿಸುತ್ತಿದ್ದರು) ಬಂದರು. ದೋಡ್ಡ ಮೀಸೆ ಬೆಳೆಸಿದ್ದ ಅವರು ನೋಡೊಕ್ಕೆ ಪೈಲ್ವಾನ್ ತರ ಇದ್ರು. ತಕ್ಷಣ ನಾನು ಅಲ್ಲಿಂದ ಜಾಗ ಕಾಲಿ ಮಾಡಿದೆ. ಈ ಘಟನೆಯನ್ನು ಚುಟುಕ ರೂಪದಲ್ಲಿ ಬರೆದಿದ್ದೇನೆ.

Wednesday 21 November 2007

ಹೈದರಾಬಾದ್ನಲ್ಲಿ ದೊಡ್ಡ ಗಣೇಶ

ಹೈದರಾಬಾದ್-ನ ಖೈರತಾಬಾದ್ ಎಂಬ ಜಾಗದಲ್ಲಿ ಪ್ರತಿ ವರುಷ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಪ್ರತಿಮೆ ಕೂಡಿಸುತ್ತಾರೆ. ಇದರ ವಿಷೇಶವೆಂದರೆ, ಈ ಪ್ರತಿಮೆ ಹೈದರಾಬಾದ್ನಲ್ಲೆ ಅತಿ ದೊಡ್ಡ ಪ್ರತಿಮೆ! ಈ ಪ್ರತಿಮೆಯನ್ನು ನೋಡಲು ಬಹಳ ಜನ ಬರುತ್ತಾರೆ. ಈ ವರುಷ, ಈ ಗಣೇಶನ ಎತ್ತರ ಸುಮಾರು ೪೫ ಅಡಿ! ಇನ್ನೊಂದು ವಿಷೇಶವೆಂದರೆ, ಈ ಪ್ರತಿಮೆಯನ್ನು ಪ್ರಾಕೃತಿಕ ಬಣ್ಣಗಳಿಂದ ಮಾಡಿದ್ದಾರೆ. ಈ ಗಣೇಶನನ್ನು ನನ್ನ ಕ್ಯಾಮರದಲ್ಲಿ ಸೆರೆ ಹಿಡಿದ ಚಿತ್ರ ನೋಡಿ. ಗಣೇಶನ ಕೈಯ ಮೇಲೆ ನಿಂತಿರುವ ವ್ಯಕ್ತಿಗಳನ್ನು ಗಮನಿಸಿ. ಈ ಪ್ರತಿಮೆಯ ಎತ್ತರ ಎಷ್ಟಿದೆ ಎಂದು ನೀವು ಊಹಿಸಬಹುದು.


Friday 16 November 2007

ಶುಕ್ರನ ಕಂಡಿರಾ?

ಇವತ್ತು ನನ್ನ ಮನೆಯವರು ಹೈದರಾಬಾದಿಗೆ ಬರುತ್ತಿದ್ದರಿಂದ, ನಾನು ಬೆಳಗ್ಗೆ ೫ಕ್ಕೆ ಎದ್ದು ರೈಲು ನಿಲ್ದಾಣಕ್ಕೆ ಹೊರಡಲು ಸಿದ್ದನಾಗಿ, ಮನೆಯಿಂದ ಹೊರಗಡೆ ಬಂದೆ. ನನ್ನ ಮನೆ ಪೂರ್ವ ದಿಕ್ಕಿನ ಕಡೆ ಮುಖ ಮಾಡಿದೆ. ಹಾಗಾಗಿ, ನನಗೆ ತಕ್ಷಣ ಆಕಾಶದಲ್ಲಿ ಮಿನುಗುತ್ತಿದ್ದ ಒಂದು ತಾರೆ ಕಾಣಿಸಿತು. ಅದರ ಪ್ರಭೆ ನೋಡಿ ಅದು ಶುಕ್ರ ಗ್ರಹ ಎಂದು ಖಾತ್ರಿಯಾಯಿತು. ಶುಕ್ರ ಗ್ರಹವನ್ನು ಬೆಳಗಿನ ಜಾವ ನೋಡಿ ಬಹಳ ದಿವಸ ಆಗಿತ್ತು.

ಶುಕ್ರ (ಇಂಗ್ಲಿಶ್ನಲ್ಲಿ ವೀನಸ್) ಒಂದು ಅಭೂತಪೂರ್ವ ಗ್ರಹ. ಬಹಳ ಹೊಳಪಾಗಿ ಕಾಣುತ್ತದೆ. ಸೂರ್ಯ ಮತ್ತು ಚಂದ್ರರ ನಂತರ ಬಹಳ ಪ್ರಕಾಶಮಾನವಾಗಿ ಕಾಣುವ ಕಾಯ ಇದು. ವರ್ಷದ ಪ್ರಾರಂಭದಲ್ಲಿ ಇದು ಸಂಜೆಯ ಹೊತ್ತಿಗೆ ಪಶ್ಚಿಮ ದಿಕ್ಕಿನಲ್ಲಿ ಕಾಣುತ್ತದೆ. ವರ್ಷದ ಕೊನೆಯಲ್ಲಿ ಇದು ಬೆಳಗಿನ ಜಾವ ಪೂರ್ವ ದಿಕ್ಕಿನಲ್ಲಿ ಕಾಣುತ್ತದೆ. ಅದಕ್ಕೆ ಇದನ್ನು ಇಂಗ್ಲಿಷ್ನಲ್ಲಿ Evening Star ಮತ್ತು Morning Star ಎಂದು ಕರೆಯುತ್ತಾರೆ. (Star ಎಂದರೆ ನಕ್ಷತ್ರ ಎಂದು. ಆದರೆ ಶುಕ್ರ ಒಂದು ಗ್ರಹ).

ಶುಕ್ರ ಗಾತ್ರದಲ್ಲಿ ಭೂಮಿಯನ್ನು ಹೋಲುತ್ತದೆ. ಸೂರ್ಯನಿಂದ ಎರಡನೆ ಹತ್ತಿರದ ಗ್ರಹ (ಬುಧ ಸೂರ್ಯನ ಸಮೀಪವಿರುವ ಗ್ರಹ). ಶುಕ್ರನ ನಂತರ ಭೂಮಿ ಇದೆ. ಭೂಮಿಗೆ ಸಮೀಪವಿರುವ ಗ್ರಹ ಈ ಶುಕ್ರ. ಭೂಮಿಗೆ ಚಂದ್ರನಿರುವಂತೆ, ಶುಕ್ರನಿಗೆ ಉಪಗ್ರಹವಿಲ್ಲ. ಶುಕ್ರ ತಿರುಗುವ ರೀತಿ ಭೂಮಿಗೆ ತತ್ವಿರುದ್ದ. ಭೂಮಿಯಲ್ಲಿ ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ಆದರೆ ಶುಕ್ರನಲ್ಲಿ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗುತ್ತಾನೆ! ಶುಕ್ರನ ಒಂದು ದಿನ ಭೂಮಿಯ ೨೪೩ ದಿನಗಳಿಗೆ ಸಮ! ಆದರೆ ಶುಕ್ರನಲ್ಲಿ ವಾಸಿಸಲು ಸಾದ್ಯವಿಲ್ಲ. ಶುಕ್ರನಲ್ಲಿ ಶೆಕೆ ಬಹಳ ಜಾಸ್ತಿ (ಸುಮಾರು ೪೬೦ ಡಿಗ್ರಿ!).

ನಮ್ಮ ಪುರಾಣದ ಪ್ರಕಾರ, ಶುಕ್ರ ಭ್ರುಗು ಮಹರ್ಷಿಯ ಪುತ್ರ. ಹಾಗು ಅಸುರರ ಗುರು.

ಆಕಾಶದಲ್ಲಿ ಶುಕ್ರನನ್ನು ನೋಡುವುದೇ ಚೆನ್ನ.

Tuesday 13 November 2007

ಮುನ್ನುಡಿ

ನಾನು ಈಗಾಗಲೆ ಒಂದು ಬ್ಲಾಗನ್ನು ಬರೆಯುತ್ತಿದ್ದೇನೆ. ಆದರೆ ಕನ್ನಡದಲ್ಲಿ ಮಾತ್ರ ಬರೆಯಬೇಕೆಂದು ಈ ಹೊಸ ಬ್ಲಾಗ್ ಪ್ರಾರಂಭ ಮಾಡಿದ್ದೇನೆ. ಈ ಬ್ಲಾಗಿನಲ್ಲಿ ನನ್ನ ಅನಿಸಿಕೆಗಳನ್ನು ಬರೆಯುತ್ತೇನೆ.